ಶುಕ್ರವಾರ, ಅಕ್ಟೋಬರ್ 9, 2015

ಉಪದ್ರ

"ಜೋಕುಲಿತ್ತಿನಲ್ಪ ಎನನ್ ಕೌಂಪಡೆ.. ಪಂಡ್ ದ್ ಬ್ಯಾರಿ ಪಂತೆಗೆ.. "

ಹಳೆಯ ತುಳು ಗಾದೆಯೊಂದು ಇಂದು ನೆನಪಾಯಿತು.. ಕಾರಣ ಎರಡೆರಡು ಬಾರಿ ಮಕ್ಕಳ ಉಪದ್ರ ಜಾಸ್ತಿಯಾಗಿ ಇಂದು ಕಾಣಸಿಕ್ಕಿತು.. ಹಾಗಾಗಿ ಬರೆಯುತ್ತಿದ್ದೇನೆ..

ಘಟನೆ 1:
ಅದು ಗಾಂಧೀ ಜಯಂತಿ ಕಾರ್ಯಕ್ರಮ.. ಮುಖ್ಯ ಅತಿಥಿಗಳು ಬಹಳ ಗಹನವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಪುಟಾಣಿ ಮಗುವೊಂದು ತನ್ನಷ್ಟಕ್ಕೇ ಮಾತನಾಡುತ್ತಾ ಚೇಷ್ಟೆ ಮಾಡುತ್ತಿದೆ. ತಾಯಿಯ ಜೊತೆಗೆ ಕ್ಷಣಕ್ಕೊಮ್ಮೆ ಹಠ ಮಾಡುತ್ತಿದೆ. ಆ ಕಡೆ ಈ ಕಡೆ ಕುಳಿತವರಿಗೆ ಮಗುವನ್ನು ನೋಡುವುದೋ ಅಥವಾ ಭಾಷಣ ಕೇಳುವುದೋ ಎಂಬ ಗೊಂದಲ. ತಾಯಿಯೂ ಮಗುವನ್ನು ಸುಮ್ಮನಿರಿಸುವ ಪ್ರಯತ್ನ ಮಾಡಲಿಲ್ಲ. ಮಗು ತನ್ನ ಚಿರಿಪಿರಿ ಮುಂದುವರಿಸಿತು. ಎಂದೂ ಯಾವುದಕ್ಕೂ ಮಾತನಾಡದ ನಮ್ಮವರು ಸಹಿಸಿಕೊಂಡು ಕೂತರು. ಎಷ್ಟು ಕೇಳಿದರೋ ದೇವರೇ ಬಲ್ಲ!

ಘಟನೆ 2:
ಬಸ್ಸಿನಲ್ಲಿ ಮನೆಗೆ ಬರುವಾಗ ಸೀಟು ಸಿಗದೆ ಕೊನೆಗೆ ಮಗು ಕುಳ್ಳಿರಿಸಿದವರ ಪಕ್ಕ ಕುಳಿತೆ.
ಆ ಮಗುವಿನ ತಂದೆ ಮಗುವಿಗೆ ಹೆಚ್ಚು ಜಾಗ ನೀಡಿದರೆ ವಿನಹ ನನಗಲ್ಲ. ಇಬ್ಬರು ಕೂರುವ ಜಾಗದಲ್ಲಿ ಮೂವರು ಕುಳಿತೆವು. ಮಗು ಒಂದೇ ಸಮನೆ ರಂಪ ಮಾಡುತ್ತಿತ್ತು. ಅಪ್ಪನ ಕಿಸೆಯನ್ನು ಎಳೆದಾಡುತ್ತಿತ್ತು. ನನ್ನ ಪ್ಯಾಂಟು, ಶರಟಿನ ಮೇಲೂ ಧಾಳಿಯಾಯಿತು. ಮಗುವಿನ ಅಪ್ಪನಿಗೆ ಇದೆಲ್ಲಾ ಖುಷಿ ಕೊಡುತ್ತಿತ್ತೇನೋ. ಮೊದಲೇ ಕುಳಿತು ಕೊಳ್ಳಲು ಜಾಗವಿಲ್ಲ. ಅದರ ಜೊತೆಗೆ ಈ ಮಗುವಿನ ಪಕ್ಕವಾದ್ಯ. ನಿಧಾನಕ್ಕೆ 'ಕಣ್ಣು ಕೂರಿ'ದಂತಾದರೆ ಮಗುವಿನ ಸ್ವರ ತಾರಕಕ್ಕೇರುತ್ತಿತ್ತು. ಯಾರಾದರೂ ಹಿರಿಯರು ಬಂದರೆ ಸೀಟು ಬಿಟ್ಟುಕೊಟ್ಟು ಇದರಿಂದ ಪಾರಾಗಬಹುದು ಎಂದು ನಾನು ಆಲೋಚಿಸುತ್ತಿದ್ದೆ. ಆದರೆ ಇಂದು ಯಾರೂ ಬರಲೇ ಇಲ್ಲ. ಆವಾಗಲೇ ಬರೆಯಬೇಕು ಅಂದುಕೊಂಡಿದ್ದೆ, ಆದರೆ ಮೊಬೈಲ್ ಹೊರತೆಗೆದರೆ ಎಲ್ಲಿ ಅದೂ ಕೂಡ ಮಗುವಿನ ಧಾಳಿಗೆ ತುತ್ತಾಗುತ್ತೇನೋ ಎಂದು ಹೊರತೆಗೆಯಲಿಲ್ಲ.

ಮಕ್ಕಳೆಂದರೆ ನನಗೆ ಪ್ರೀತಿಯಿದೆ. ಆದರೆ ಹಠಕ್ಕೊಂದು ಮಿತಿಯಿದೆ ಅಲ್ಲವೇ. ಗಂಭೀರ ಸಮಾರಂಭಗಳಲ್ಲಿ ಅಥವಾ ಪೂಜೆ ಪುನಸ್ಕಾರಗಳಾಗುವಾಗ ಮಕ್ಕಳಿಂದ ನಮ್ಮ ಏಕಾಗ್ರತೆಗೆ ಭಂಗವಾಗುವುದರೆ  ಕಷ್ಟವಾಗುತ್ತದೆ. ಎಲ್ಲರೂ ಕಷ್ಟಪಡುವುದಕ್ಕಿಂತ ಮಗುವಿನ ತಾಯಿ ಅಥವಾ ತಂದೆ ಆ ಮಗುವನ್ನು ಹೊರಗೆ ಎತ್ತಿಕೊಂಡು ಹೋಗುವುದು ಒಳ್ಳೆಯದು ಅಂತ ನನ್ನ ಅನಿಸಿಕೆ.

ನನಗೂ ಒಂದು ಮಗು ಆದರೆ ಇದೆಲ್ಲಾ ಅರ್ಥ ಆಗಬಹುದು..!

- ಸುಚಿತ್ ಕೋಟ್ಯಾನ್ ಕುರ್ಕಾಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ