ಶುಕ್ರವಾರ, ಅಕ್ಟೋಬರ್ 9, 2015

ರೇಡಿಯೋ ನೆನಪು

ರೇಡಿಯೋ ಎಂದರೆ ಸಾಕು ಬಾಲ್ಯ ನೆನಪಾಗಿಬಿಡುತ್ತೆ...
ರೇಡಿಯೋ ಕೇಳುತ್ತಲೇ ಬೆಳೆದವ ನಾನು..
ಬೆಳಿಗ್ಗೆ ಏಳೋ ಹೊತ್ತಿಗೆ ಅಪ್ಪ ರೇಡಿಯೋ ಇಟ್ಟಿರುತ್ತಿದ್ದರು.. ಆಕಾಶವಾಣಿಯ ಮುಂಜಾವದ ಟ್ಯೂನ್ ಕೇಳುವುದು ಒಂಥರಾ ಸುಪ್ರಭಾತ ಕೇಳಿದಷ್ಟೇ ಹಿತ.. ಹಲ್ಲುಜ್ಜಿ ತಿಂಡಿ ತಿನ್ನುವ ಹೊತ್ತಿಗೆ ಮಂಗಳೂರು ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ, ನಂತರ ಪ್ರದೇಶ ಸಮಾಚಾರ ಬರುತ್ತಿತ್ತು.  "ಸಂಸ್ಕೃತ ವಾರ್ತಾ ಶ್ರುಯಂತಾಮ್ ಪ್ರವಾಚಕ ಬಲದೇವಾನಂದ ಸಾಗರಃ ", "ಪ್ರದೇಶ ಸಮಾಚಾರ ಓದುತ್ತಿರುವವರು ಚಾಮರಾಜ್.." ಎಂಬ ಸಾಲುಗಳು ಈಗಲೂ ಒಮ್ಮೊಮ್ಮೆ  ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. 
ಇನ್ನು 'ಮಾತುಕತೆ'ಯಲ್ಲಿ ಮಾತನಾಡುತ್ತಿದ್ದ ನಾರಾಯಣಿ ದಾಮೋದರ್ ನಮ್ಮ ಪಕ್ಕದಲ್ಲಿದ್ದಾರೇನೋ ಎಂದು ಅನ್ನಿಸುತ್ತಿತ್ತು. 'ರಸವಾರ್ತೆ'ಯ ಸುದ್ದಿಗಳು ಕಚಗುಳಿಯಿಡುತ್ತಿದ್ದವು. 'ಕೋರಿಕೆ ' ಕಾರ್ಯಕ್ರಮದಲ್ಲಿ ಬರುತ್ತಿದ್ದ ಸಾಲು ಸಾಲು ಹೆಸರುಗಳು, ಅವರ ಮಾವ, ಇವರ ಮನೆಯವರು ಎಂಬಿತ್ಯಾದಿ ವಿಚಿತ್ರ ವಿಧದ ರಿಕ್ವೆಸ್ಟ್ ನಗು ತರಿಸುತ್ತಿತ್ತು. 
ಸಂಜೆಯಾಗುತ್ತಿದ್ದಂತೆ 'ಕೃಷಿರಂಗ', 'ಯುವವಾಣಿ' ಕಾರ್ಯಕ್ರಮಗಳು, ಅವುಗಳ ಥೀಮ್ ಟ್ಯೂನ್ ಗಳು ಇಂದಿಗೂ ಗುನುಗುಣಿಸುವಷ್ಟು ಮನಸ್ಸಿನಲ್ಲಿ ಹಚ್ಚಹಸುರಾಗಿವೆ... ಈ ಭೂಮಿ ಬಣ್ಣದ ಬುಗುರಿ, ಇಬ್ಬನಿ ತಬ್ಬಿದ ಇಳೆಯಲಿ, ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ, ಮುಂತಾದ ಮಧುರ ಹಾಡುಗಳನ್ನು 'ಚಿತ್ರಗೀತೆ'ಯಲ್ಲಿ ಕೇಳಿದ್ದು ಮರೆಯುವುದಾದರೂ ಹೇಗೆ? 
ಇಂದು ಟಿ.ವಿ, ಮೊಬೈಲುಗಳು ಇರುವ ನೆಮ್ಮದಿಯನ್ನೂ ಹಾಳುಮಾಡುತ್ತಿರುವಾಗ ಮನಸ್ಸು ಮತ್ತೆ ರೇಡಿಯೋವನ್ನು ಬಯಸುತ್ತಿದೆ. ಮನಸ್ಸಿನ ಮಾತಿಗೆ ಓಗೊಟ್ಟು ರೇಡಿಯೋ ಖರೀದಿಸಿ ಒಂದು ತಿಂಗಳಾಯಿತು.. ನನ್ನಷ್ಟಕ್ಕೆ ನಾನು ಖುಷಿಯಾಗಿದ್ದೇನೆ ಹಾಗೂ ಮುಂದೆಯೂ ಖುಷಿಯಾಗಿರುತ್ತೇನೆ..
-ಸುಚಿತ್ ಕೋಟ್ಯಾನ್ ಕುರ್ಕಾಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ