ಶನಿವಾರ, ಅಕ್ಟೋಬರ್ 17, 2015

ಮರೆಯಲಾಗದ ವಿದ್ಯಾರ್ಥಿಗಳು- 02

ತನ್ನ ಇರುವಿಕೆ ಲೋಕಕ್ಕೆಲ್ಲಾ ಗೊತ್ತಾಗುವಂತೆ ಮಾಡುವವನು ರಾಮಾಂಜಿ. ನನ್ನ ವೃತ್ತಿ ಜೀವನದ ಮೊದಲ ವರ್ಷದ ವಿದ್ಯಾರ್ಥಿ. ಆಗಲೇ ಬೇರೆ ಬೇರೆ ಹೋರಾಟಗಳಲ್ಲಿ, ವಿವಿಧ ವಿದ್ಯಾರ್ಥಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದ್ದ.
ಕ್ಲಾಸಿನಲ್ಲಿ ಇದ್ದದ್ದೇ ಆರು ಜನ. ಒಬ್ಬ ವರ್ಷವಿಡೀ ಜಿಮ್ ನಲ್ಲಿದ್ದರೆ ಈ ರಾಮಾಂಜಿ ಬೆಂಗಳೂರು ಮಂಗಳೂರು ಎಂದು ಅಲೆಯುತ್ತಿದ್ದ. ಒಂದಿಷ್ಟು ಕತೆ ಕವನಗಳನ್ನು ಬರೆಯುತ್ತಿದ್ದ. ತನ್ನ ಧೋರಣೆಗಳಿಂದ ಕಾಲೇಜಿನಲ್ಲಿ ಕೆಲವರ ಪ್ರೀತ್ಯಾದರಕ್ಕೂ ಕೆಲವರ ನಿರ್ಲಕ್ಷ್ಯಕ್ಕೂ ಪಾತ್ರನಾಗಿದ್ದ ಈ ರಾಮಾಂಜಿಯಲ್ಲಿ ನನಗೆ ಇಷ್ಟವಾದದ್ದು ಆತನ ಮುಖದಲ್ಲಿದ್ದ ನಗೆ ಮತ್ತು ಸಿಕ್ಕಿದಲ್ಲೆಲ್ಲಾ ನಮಸ್ತೆ ಸರ್ ಎಂಬ 'ಧರ್ಮ'ಕ್ಕೆ ಸಿಗುತ್ತಿದ್ದ ಗೌರವ!
ರಾಮಾಂಜಿಯಲ್ಲಿ ಜನರನ್ನು ಆಕರ್ಷಿಸಿವ ಶಕ್ತಿಯಿತ್ತು. ಕೃಷ್ಣಾಷ್ಟಮಿಗೆ ಈತ ವೇಷಹಾಕಿದಾಗ ಆ ವಿಚಿತ್ರ ವೇಷವನ್ನು ಮೆಚ್ಚದವರು ಬಹಳ ಕಡಿಮೆ. ಅಘೋರಿಯಾಗಿ, ಆಫ್ರಿಕಾದ ಟ್ರೈಬಲ್ ವೇಷಧಾರಿಯಾಗಿ, ಚಿತ್ರ ವಿಚಿತ್ರ ವೇಷಗಳಿಂದ ಉಡುಪಿ ಆಸುಪಾಸಿನಲ್ಲಿ ರಾಮಾಂಜಿ ಬಹಳ ಫೇಮಸ್ ಆಗಿದ್ದಾನೆ. ಫೋಟೋಗ್ರಾಫರ್ಸ್ ಅಂತೂ ಈತನ ವೇಷವನ್ನು ಸೆರೆಹಿಡಿಯದೆ ಬಿಡುವುದೇ ಇಲ್ಲ. ಇದರಲ್ಲೇ ಹೆಚ್ಚು ಖುಷಿ ನಮ್ಮ ರಾಮಾಂಜಿಗೆ.
ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ ಅನ್ನುವುದು ಬಿಟ್ಟರೆ ಆತನ ಬಾಲ್ಯದಲ್ಲಿ ಖುಷಿಕೊಡುವ ನೆನಪುಗಳಿಲ್ಲ. ಬೆಳೆದದ್ದು 'ನಮ್ಮ ಭೂಮಿ' ಎಂಬ ಫೌಂಡೇಶನ್ ನಲ್ಲಿ. ರಾಜಕೀಯ ಧುರೀಣರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲರ ಪರಿಚಯ ಈತನಿಗಿದ್ದರೂ ತನ್ನ ಸ್ವಂತಿಕೆಯಿಂದ ಇದಕ್ಕೂ ಹೆಚ್ಚು ಏನಾದರೂ ಈತ ಸಾಧಿಸಬೇಕಿತ್ತು ಎಂದು ಯಾವಾಗಲೂ ಅನ್ನಿಸುತ್ತದೆ.
ಇಂತಿಪ್ಪ ರಾಮಾಂಜಿಯನ್ನು ಯಾಕೆ ಮರೆಯಲು ಸಾಧ್ಯವಿಲ್ಲವೆಂದರೆ ಆತ ಹೆಸರೆತ್ತಿದ ಕೂಡಲೇ ಯಾವುದಾದರೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ.
ಗೊತ್ತಿಲ್ಲ.. ಈಗ ಸ್ವಲ್ಪ ಹೊತ್ತಿನಲ್ಲಿ ಕಾಲ್ ಬಂದರೂ ಬರಬಹುದು!
-ಸುಚಿತ್ ಕೋಟ್ಯಾನ್ ಕುರ್ಕಾಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ