ಬುಧವಾರ, ಅಕ್ಟೋಬರ್ 14, 2015

ಮರೆಯಲಾಗದ ವಿದ್ಯಾರ್ಥಿಗಳು -03

ಅಶ್ವತ್ಥ ಸುಬ್ರಾಯ ಹೆಗಡೆ ಆತನ ಹೆಸರು. ಅರ್ಧಕ್ಕೆ ಕಾಲೇಜು ಬಿಟ್ಟವ. ಆತ ಬಿಟ್ಟ ಅನ್ನುವುದಕ್ಕಿಂತಲೂ ಕಾಲೇಜು ಆತನನ್ನು ತೆಗಯಿತು ಅನ್ನುವುದು ಹೆಚ್ಚು ಸರಿ. ಕಾರಣ, ಕಾಲೇಜಿನ ನಿಯಮಗಳ ಶಿಸ್ತು ಅನ್ನುವುದು ಆತನಿಗೆ ಗೊತ್ತಿರಲಿಲ್ಲ.

ಪ್ರಥಮ ವರ್ಷ ಬಂದಾಗ ಬಹಳ ನಿರೀಕ್ಷೆ ಮೂಡಿಸಿದ್ದ ಸ್ಫುರದ್ರೂಪಿ ಹುಡುಗನೀತ. ಯಕ್ಷಗಾನದ ಸ್ತ್ರೀ ವೇಷಧಾರಿ ಬಣ್ಣ ಕಳಚಿ ಬಂದಾಗ ಕಾಣುವಷ್ಟು ಚಂದ ಕಾಣುತ್ತಿದ್ದ. ಶಿರಸಿಯಿಂದ ಬಂದಿದ್ದರಿಂದ ಗದ್ದೆ ತೋಟಗಳ ಮೇಲೆ ಸಹಜ ಆಸಕ್ತಿಯಿತ್ತು. ಸಾಹಿತ್ಯವನ್ನೂ ತುಂಬಾ ಪ್ರೀತಿಸುತ್ತಿದ್ದ. ಸುತ್ತಾಡಲು ನಮ್ಮ ಜೊತೆ ಯಾವಾಗಲೂ ಸಿದ್ಧನಿರುತ್ತಿದ್ದ. ಉರಗತಜ್ಞ ಗುರುರಾಜ ಸನಿಲರ ಜೊತೆ ಸೇರಿ ಹಾವುಗಳ ಬಗ್ಗೆನೂ ಆಸಕ್ತಿ ತೋರಿಸಿದ್ದ. (ನಾಗರಹಾವೊಂದು ಆತನ ಎರಡು ಕಾಲಿನ ನಡುವೆ ಹಾದುಹೋಗುವ ವೀಡಿಯೋ ಇಂದಿಗೂ ನಮ್ಮಲ್ಲಿದ್ದು ನೋಡುವವರಿಗೆ ಅಚ್ಚರಿ ಮೂಡಿಸುತ್ತೆ) ಖಂಡಿತವಾಗಿಯೂ ಒಬ್ಬ ಆದರ್ಶ ವಿದ್ಯಾರ್ಥಿಯಾಗಿ ಅಶ್ವತ ಬೆಳೆಯುವ ದಾರಿಯಲ್ಲಿದ್ದ.

ಆದರೆ ಈ ಹುಡುಗನಿಗೊಂದು ದೌರ್ಬಲ್ಯವಿತ್ತು. ತರಗತಿಗೆ ಬರುವುದರಲ್ಲಿ ಈತ ಬಹಳ ಹಿಂದೆ. ಮೊದಲ ಸೆಮಿಸ್ಟರ್ ನಲ್ಲಿ ಹಾಜರಿ ಕಮ್ಮಿ ಬಂದಾಗ ನಾವು ಆತನ ಪರವಾಗಿ ನಿಂತೆವು. ಯಾಕೆಂದರೆ ಅಶ್ವತ್ಥನ ತಂದೆಗೆ ಹುಷಾರಿರಲಿಲ್ಲ ಹಾಗಾಗಿ ಊರಿಗೆ ಹೋಗಿ ಅಡಕೆ ಕೊಯ್ಯುವ ಜವಾಬ್ದಾರಿ ಈತನೇ ಮಾಡಬೇಕಿತ್ತು. ಇದರ ಜೊತೆಗೆ ಅಡುಗೆ ಕೆಲಸಗಳಿಗೆ, ಬಡಿಸುವುದಕ್ಕೆ ಈತ ಹೋಗುತ್ತಿದ್ದ. ಹಾಗಾಗಿ ಕಷ್ಟ ಪಡುತ್ತಿದ್ದ ವಿದ್ಯಾರ್ಥಿಗೆ ಬೆಂಬಲಿಸುವುದರಲ್ಲಿ ತಪ್ಪಿಲ್ಲವೆಂದು ನಾವಂದುಕೊಂಡಿದ್ದೆವು, ಅವಕಾಶ ನೀಡಿದ್ದೆವು.

ಆದರೆ ಮುಂದೆ ಹುಡುಗನಿಗೆ ಅದೇ ಅಭ್ಯಾಸವಾಯಿತು. ಮೂರನೇ ಸೆಮಿಸ್ಟರ್ ನಲ್ಲಿ ಯಾವ ತರಗತಿಗೂ ಬರಲೇ ಇಲ್ಲ. ಸಹಜ ಕಳಕಳಿಯಿಂದ ನಾವು ಎಷ್ಟು ಫೋನ್ ಕಾಲ್ ಮಾಡಿದರೂ ಈತ ಸ್ವೀಕರಿಸಲೇ ಇಲ್ಲ. ಅಪಾತ್ರನಿಗೆ ಸಹಾಯಮಾಡಿದೆವೆನೋ ಎಂದು ನಮಗೆ ಅನ್ನಿಸಿತು. ಅಶ್ವತ್ಥನ ಮೇಲೆ ನಂಬಿಕೆ ಕಡಿಮೆಯಾಯಿತು. 'ಶಾರ್ಟೇಜ್' ಇದ್ದುದರಿಂದ ಕಾಲೇಜು ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಸಹಜವಾಗಿಯೇ ಅಶ್ವತ್ಥ ಕಾಲೇಜು ಬಿಟ್ಟ.

ಮತ್ತೆ ಅಶ್ವತ್ಥ ಕಾಣಸಿಗಲಿಲ್ಲ. ಅರ್ಧಕ್ಕೆ ಕಾಲೇಜು ಬಿಡುವವರ ಮೇಲೆ ಬೇಸರ, ಸಿಟ್ಟು ಎಲ್ಲವೂ ಬರುತ್ತದೆ. ಅದರಲ್ಲೂ ನಮಗೆ ಪ್ರಿಯರಾದವರೊಬ್ಬರು ಹೀಗೆ ಮಾಡಿದಾಗ ನಿರಾಶೆಯಾಗುತ್ತದೆ. ಬಹುಶಃ ಆತ ಈಗ ಊರಲ್ಲೇ ಇದ್ದಾನೆ. ಮನಸ್ಸು ಮಾಡಿದ್ದರೆ ಡಿಗ್ರಿ ಮುಗಿಸುವ ಹಂತದಲ್ಲಿದ್ದ. ಏನು ಮಾಡೋಣ ಹೇಳಿ? ಎಲ್ಲಿಯೇ ಇರಲಿ. ಸುಖವಾಗಿರಲಿ. ಅದಷ್ಟೇ ಹಾರೈಕೆ.

-ಸುಚಿತ್ ಕೋಟ್ಯಾನ್ ಕುರ್ಕಾಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ