ಸೋಮವಾರ, ಏಪ್ರಿಲ್ 25, 2016

ಕರಾವಳಿ ಹೀಗೇಕಾಯಿತು?

ಮರೆತು ಬಿಟ್ಟೆವೇ ನಮ್ಮ ಹಿರಿಯರು ಪಾಲಿಸಿದ ಧಾರ್ಮಿಕ ಸಾಮರಸ್ಯವನ್ನು?

ಕೆಲದಿನಗಳಿಂದ ವಾಟ್ಸ್ಯಾಪ್ನಲ್ಲಿ ಹರಿದಾಡುತ್ತಿದ್ದ ಮೆಸೇಜೊಂದರ ಆರಂಭಿಕ ಸಾಲು ಹೀಗಿತ್ತು-ಕರಾವಳಿಯಲ್ಲಿ ಕ್ರೈಸ್ತಧರ್ಮದವರು ಬೆಳೆಯುತ್ತಿದ್ದ ಮಲ್ಲಿಗೆ ಹೂವನ್ನು ಮುಸಲ್ಮಾನ ವ್ಯಾಪಾರಿಗಳು ಮಾರಾಟಮಾಡುತ್ತಿದ್ದರೆ ಹಿಂದೂಧರ್ಮೀಯರು ಅದನ್ನು ಕೊಂಡುಕೊಳ್ಳುತ್ತಿದ್ದರು ಎಂಬುದಾಗಿ. ಹೌದು, ಕರಾವಳಿ ಧಾರ್ಮಿಕ ಸಾಮರಸ್ಯಕ್ಕೆ ಹೆಸರಾದ ಪ್ರದೇಶ. ಅಸಹನೆ, ಅಸಹಿಷ್ಣುತೆಗಳು ಇಲ್ಲಿ ಇರಲೇ ಇಲ್ಲವೆಂದರೂ ತಪ್ಪಿಲ್ಲ. ಒಂದು ಪರಂಪರೆಯಾಗಿ ಬೆಳೆದುಬಂದ ಧಾರ್ಮಿಕ ಸಾಮರಸ್ಯತೆ ಇತ್ತೀಚೆಗಿನ ದಿನಗಳಲ್ಲಿ ಕದಡುತ್ತಾ ಬಂದಿರುವುದು ವಿಷಾದಕರ. ಒಂದು ಕ್ಷಣ ನಿಂತು ಯೋಚಿಸಿದರೆ, ನಮ್ಮ ಹಿರಿಯರು ಸಾಗಿ ಬಂದ ದಾರಿಯತ್ತ ಒಮ್ಮೆ ನೋಟ ಹರಿಸಿದರೆ ನಾವೆಲ್ಲಿ ದಾರಿ ತಪ್ಪಿದ್ದೇವೆಂದು ತಾನಾಗಿಯೇ ಅರಿವಿಗೆ ಬರುತ್ತದೆ.
ಅವಿಭಜಿತ ದಕ್ಷಿಣ ಕನ್ನಡದ ಧಾರ್ಮಿಕ ಸಂಸ್ಕೃತಿ ಇತರ ಪ್ರದೇಶಗಳಿಗಿಂತ ಭಿನ್ನವಾದುದು. ತುಳುನಾಡಿನ ಭೂತಾರಾಧನೆ, ನಾಗಾರಾಧನೆ, ತುಳು ಜಾನಪದ ಕಾವ್ಯವಾದ ಪಾಡ್ದನ ಇಲ್ಲಿನ ಸಾಂಸ್ಕೃತಿಕ ವೈಭವವನ್ನು ಸಾರುತ್ತವೆ. ಇವುಗಳಲ್ಲಿ ಪ್ರಮುಖ ಕೆಲವನ್ನು ಉಲ್ಲೇಖಿಸುವುದಾದರೆ ಬಬ್ಬರ್ಯ ಪಾಡ್ದನದಲ್ಲಿ ಬರುವ ಬಾಬು ಇಲ್ಲವೇ ಬಾವ ಬ್ಯಾರಿ ಒಬ್ಬ ಮುಸಲ್ಮಾನ. ಈತನ ತಾಯಿ ಫಾತಿಮಾ, ಈತನ ತಂದೆ ಮುರವ ಯಾನೇ ಉಮರ ಬ್ಯಾರಿ. ರೀತಿ ಬಾವ ಬ್ಯಾರಿಯನ್ನು ಒಬ್ಬ ದೈವಿಕ ಪುರುಷನನ್ನಾಗಿ ಆಚರಿಸಲಾಗುತ್ತದೆ. ಅತ್ತಾವರ ದೆಯ್ಯಗಳು, ಜುಮಾದಿ ದೈವ ಪಾಡ್ದನ, ಸಿರಿ ಪಾಡ್ದನಗಳಲ್ಲಿ ಮುಸ್ಲಿಮರು ಪಾತ್ರಗಳಾಗಿ ಮಿಂಚಿರುವುದು ತುಳುವರ ಧಾರ್ಮಿಕ ವಿಶಾಲತೆಗೆ ಸಾಕ್ಷಿ. ಮಂತ್ರವಾದಿ ಆಲಿಯಂತೂ ಆಲಿಭೂತವಾಗಿ ಆರಾಧ್ಯದೈವವಾಗಿದ್ದಾನೆ. ಉದ್ಯಾವರ ಮಾಡ ದೇವಳದ ಉತ್ಸವ, ಮುಸ್ಲಿಮ್ ವ್ಯಾಪಾರಿಯೊಬ್ಬನಿಂದ ವೀಳ್ಯ ಕೊಳ್ಳುವುದರಿಂದ ಆರಂಭವಾಗುತ್ತದೆ. ಉಡುಪಿ ಮಠಗಳ ಪರ್ಯಾಯ ಉತ್ಸವದಲ್ಲಿ ಮುಸ್ಲಿಮ್ ಕುಟುಂಬವೊಂದು ಪ್ರಭಾವಳಿ ರಚಿಸುವುದು, ರಥ ಅಲಂಕರಿಸುವುದು, ದುರುಸು ಬಾಣಗಳನ್ನು ಬಿಡುವುದು ಶತಮಾನಗಳಿಂದ ನಡೆದು ಬಂದ ಸಂಪ್ರದಾಯ. ಮೂಲ್ಕಿಯ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನದ ಹಿನ್ನೆಲೆಯಲ್ಲಿ ಬಪ್ಪ ಬ್ಯಾರಿಯೆಂಬ ಮುಸಲ್ಮಾನನಿರುವುದು ಇನ್ನೊಂದು ವಿಶೇಷ.
ನಾಡಿನ ಸಾಮರಸ್ಯವನ್ನು ಕಣ್ಣಾರೆ ಕಂಡು ದಾಖಲಿಸಿದ ವಿದೇಶಿ ಪ್ರವಾಸಿಗರೂ ಬಹಳಷ್ಟಿದ್ದಾರೆ. 1342ರಲ್ಲಿ ಭೇಟಿನೀಡಿದ್ದ ಮಹಮ್ಮದ್ ಇಬ್ನ ಬತೂತ ಮಂಗಳೂರಿನ ಹಿಂದೂ ಅರಸ ವಾಸುದೇವನನ್ನು ಒಬ್ಬ ಸಮರ್ಥ ಆಡಳಿತಗಾರನೆಂದೂ, ಇಲ್ಲಿ ಮುಸ್ಲಿಮರು ಹಿಂದೂಗಳೊಂದಿಗೆ ಅಣ್ಣತಮ್ಮಂದಿರಂತೆ ಬಾಳುತ್ತಾರೆ, ಸುಮಾರು 4000 ಮುಸಲ್ಮಾನ ವ್ಯಾಪಾರಿಗಳು ಜಿಲ್ಲೆಯಲ್ಲಿದ್ದಾರೆಂದು ಬರೆದಿದ್ದಾನೆ. ಇಟೆಲಿಯ ಪೀಟರ್ ಡಲ್ಲವಿಲ್ಲೆ 1523ರಲ್ಲಿ ಭೇಟಿ ನೀಡಿದ್ದಾಗ ಕೆಳದಿ ರಾಜರ ಸೇನಾಧಿಕಾರಿಯಾಗಿ ಮೂಸ ಬ್ಯಾರಿ ಎನ್ನುವಾತ ಸೇವೆಯಲ್ಲಿದ್ದಾನೆ ಎಂದು ಬರೆದಿರುವುದರ ಜೊತೆಗೆ ಉಳ್ಳಾಲದ ರಾಣಿ ಅಬ್ಬಕ್ಕಳ ಸೈನ್ಯದಲ್ಲಿ, ಚೌಟ, ಬಂಗ ಅರಸರ ಸೈನ್ಯದಲ್ಲಿ ಮುಸಲ್ಮಾನರು ತುಂಬಾ ಸಂಖ್ಯೆಯಲ್ಲಿದ್ದಾರೆ, ಕ್ರೈಸ್ತ ಪ್ರವಾಸಿಗರನ್ನು ಇಲ್ಲಿ ಬಹಳ ಆದರದಿಂದ ಬರಮಾಡಿಕೊಳ್ಳುತ್ತಾರೆ ಎಂದೂ ಬರೆದಿದ್ದಾನೆ.
ಉಡುಪಿ ಪ್ರಾಂತ್ಯದಲ್ಲೂ ಕೋಮು ಸೌಹಾರ್ದತೆಯ ಬಗ್ಗೆ ಹಲವಾರು ನಿದರ್ಶನಗಳು ಕಾಣಸಿಗುತ್ತದೆ. ಕಾರ್ಪೊರೇಶನ್ ಬ್ಯಾಂಕಿನ ಸ್ಥಾಪಕರಾದ ಹಾಜೀ ಅಬ್ದುಲ್ಲಾ ಸಾಹೇಬರು ಅಷ್ಟಮಠಗಳ ಮತ್ತು ಉಡುಪಿ ಜನತೆಯ ಕಷ್ಟ-ಸುಖಗಳಲ್ಲಿ ಸ್ವತಃ ಭಾಗಿಯಾಗುತ್ತಿದ್ದ ಪರೋಪಕಾರಿಯಾಗಿದ್ದರು. 1940 ದಶಕದ ರೇಶನ್ ಕಾಲದಲ್ಲಿ ಅಕ್ಕಿ ಸಿಗಲು ಕಷ್ಟವಾದಾಗ ಸಾಹೇಬರು ರಂಗೂನಿನಿಂದ ಪರ್ಯಾಯಕ್ಕೆ ಬೇಕಾಗುವ ಅಕ್ಕಿ ತರಿಸಿಕೊಟ್ಟ ಸಾಹಸಿಗರು. ಉಡುಪಿಯ ಪ್ರಸಿದ್ಧ ಲಕ್ಷದೀಪೋತ್ಸವಕ್ಕೆ ಹತ್ತಾರು ಡಬ್ಬ ಎಣ್ಣೆಯನ್ನು ತಪ್ಪದೆ ದಾನಕೊಡುತ್ತಿದ್ದರು. ಒಮ್ಮೆ ಎಣ್ಣೆ ಸಿಗದಿದ್ದ ಸಂದರ್ಭದಲ್ಲಿ ಕೃಷ್ಣನ ಉತ್ಸವ ನಿಲ್ಲಬಾರದೆಂದು ಹತ್ತಾರು ಡಬ್ಬ ತುಪ್ಪದ ದೀಪದಲ್ಲಿ ಲಕ್ಷದೀಪೋತ್ಸವವನ್ನು ನಡೆಸಿಕೊಟ್ಟದ್ದು ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿ. ಕಾರ್ಕಳದಲ್ಲಿ ಕ್ರೈಸ್ತರ ಆರಾಧನ ಕೇಂದ್ರವಾದ ಅತ್ತೂರು ಚರ್ಚ್ ವಾರ್ಷಿಕ ಉತ್ಸವದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ ಬಾಂಧವರು ಜೊತೆಯಾಗಿ ಹಬ್ಬ ಆಚರಿಸುವುದು ಇಂದಿಗೂ ನಡೆದುಬಂದಿದೆ. ಕಿನ್ನಿಗೋಳಿಯ ದಾಮಸ್ ಕಟ್ಟೆಯ ಕಿರೆಂ ಚರ್ಚ್ನಲ್ಲಿ ಹಿಂದೆ ಟಿಪ್ಪುವಿನ ಧಾಳಿಯಾದಾಗ ಚರ್ಚ್ ಉಳಿಸಲು ಸಹಾಯಮಾಡಿದ ಮೂರು ಗುತ್ತಿನ ಮನೆತನಗಳಿಗೆ ಇಂದಿಗೂ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಅಡಿಕೆ, ಬಾಳೆ ಗೊನೆ, ಹಾಗೂ ವೀಳ್ಯ ನೀಡಿ ಗೌರವಿಸಲಾಗುತ್ತದೆ. ಮೂಲಕ ಭಾವೈಕ್ಯತೆಯನ್ನು ಮೆರೆಯಲಾಗುತ್ತಿದೆ.
ಇಂಗ್ಲಿಷರ ಕಾಲದಲ್ಲಿ ಅವರ ವಿರುದ್ಧ ನಡೆದ 'ಕಲ್ಯಾಣಪ್ಪನ ಕಾಟುಕಾಯಿ' ಎಂಬ ದಂಗೆಯಲ್ಲಿ ಬಂಟ್ವಾಳದ ಮೋನು ಬ್ಯಾರಿ, ಅದ್ದುನ್ನಿ ಬ್ಯಾರಿ ಎನ್ನುವವರು ತಮ್ಮ ಹಿಂದೂ ಸಹೋದರರಿಗೆ ಹೆಗಲಿಗೆ ಹೆಗಲುಕೊಟ್ಟು ಹೋರಾಡಿ ದಂಗೆಯ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಶಿಕ್ಷೆಯನ್ನೂ ಅನುಭವಿಸಿದ್ದರು. ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಮೊದಲ ಗುಪ್ತ ಸಭೆಯು ಮಂಗಳೂರು ಬಂದರಿನಲ್ಲಿರುವ ಕಚ್ಚಿ ಮೇಮನ್ ಮಸೀದಿಯ ಖಬರ್ಸ್ಥಾನದಲ್ಲಿ ಸ್ವಾತಂತ್ರ್ಯವೀರ ದಿ. ಕಾರ್ನಾಡ್ ಸದಾಶಿವರಾಯರ ಮುಂದಾಳುತನದಲ್ಲಿ ಜರಗಿತ್ತಂತೆ. ಗಾಂಧೀಜಿಯವರು 1920 ಆಗಸ್ಟ್ 19 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಮುಸಲ್ಮಾನ ಸಭಿಕರ ಸಂಜೆ ನಮಾಜಿನ ಅನುಕೂಲತೆಗಾಗಿ ನಡುವೆ ತಮ್ಮ ಭಾಷಣ ನಿಲ್ಲಿಸಿ, ಪ್ರಾರ್ಥನೆಯ ನಂತರ ಭಾಷಣವನ್ನು ಮುಂದುವರೆಸಿದ್ದರು. ಕುಂದಾಪುರದ ಕರಾವಳಿಯಲ್ಲಿ ಮೀನುಕ್ಷಾಮ ತಲೆದೋರಿದರೆ ಮೀನುಗಾರರು 'ಸೀರನಿ ಪೂಜೆ' ಎನ್ನುವ ಆರಾಧನೆಯನ್ನು ನಡೆಸುತ್ತಾರೆ. ಪುಟ್ಟ ಮರದ ದೋಣಿಯಲ್ಲಿ ಪಂಚಕಜ್ಜಾಯವನ್ನು ತುಂಬಿ, ಮುಸ್ಲಿಂ ಮೌಲ್ವಿಯೊಬ್ಬರಿಂದ ಪ್ರಾರ್ಥನೆ ಮಾಡಿ ದೋಣಿಯನ್ನು ಸಮುದ್ರಕ್ಕೆ ತೇಲಿಬಿಡುವುದೇ ಸೀರನಿ ಪೂಜೆ.
ಇವೆಲ್ಲಾ ಹಿಂದೂ, ಮುಸಲ್ಮಾನ, ಕ್ರೈಸ್ತರ ಧಾರ್ಮಿಕ ಸಾಮರಸ್ಯ ಭಾವನೆಗಳಿಗೆ ಕೆಲವೊಂದು ಉದಾಹರಣೆಗಳಷ್ಟೇ. ನಮ್ಮ ಹಿರಿಯರು ಇಂತಹ ಸಾವಿರಾರು ಆದರ್ಶಗಳನ್ನು ನಾಡಿನಲ್ಲಿ ಬಿಟ್ಟುಹೋಗಿದ್ದಾರೆ. ಆರೆ ನಿಟ್ಟಿನಲ್ಲಿ ನಾವು ನಮ್ಮ ಮುಂದಿನ ಜನಾಂಗಕ್ಕೇನು ನೀಡುತ್ತಿದ್ದೇವೆ ಎಂಬುದನ್ನು ನೆನೆಸುವಾಗ ಆತಂಕವಾಗುತ್ತದೆ. ಮಹಾತ್ಮಾ ಗಾಂಧೀಜಿಯವರ 11 ಪ್ರತಿಜ್ಞೆಗಳನ್ನು ಆಧರಿಸಿದ ತತ್ವದಂತೆ ಸರ್ವಧರ್ಮ ಸಮಭಾವ ಪರಿಕಲ್ಪನೆ ನಮ್ಮದಾಗಬೇಕು. 'ಎಲ್ಲಾ ಧರ್ಮಗಳೂ ಶ್ರೇಷ್ಠವೇ. ಪ್ರತಿಯೊಂದು ಧರ್ಮದಲ್ಲೂ ವೈಶಿಷ್ಟ್ಯಗಳಿವೆ. ಯಾವ iವೂ ಇನ್ನೊಂದು ಧರ್ಮಕ್ಕಿಂತ ಮೇಲೂ ಅಲ್ಲ, ಕೀಳೂ ಅಲ್ಲ. ಪ್ರತಿಯೊಂದು ಧರ್ಮವೂ ಇನ್ನೊಂದು ಧರ್ಮಕ್ಕೆ ಪೂರಕ' ಎಂಬ ಅವರ ಮಾತನ್ನು ನಾವೆಲ್ಲರೂ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಧರ್ಮಗಳು ಜನರನ್ನು ವಿಭಜನೆ ಮಾಡುತ್ತವೆ ಎನ್ನುವ ಮಾತು ಕರಾವಳಿಯ ಮಟ್ಟಿಗೆ ಸತ್ಯವಲ್ಲ ಎಂಬುದನ್ನು ನಾವೀಗ ಮತ್ತೆ ಜಗತ್ತಿಗೆ ತೋರಿಸಬೇಕಾಗಿದೆ.

(ಪೂರಕ ಮಾಹಿತಿ: 'ಪೊಲಿ' ಗ್ರಂಥದಲ್ಲಿರುವ ವಹಾಬ್ ದೊಡ್ಡಮನೆಯವರ 'ಧಾರ್ಮಿಕ ಸಾಮರಸ್ಯ' ಲೇಖನ)

ಸಾವಿರಾರು ಜೀವ ಉಳಿಸಿದ ಮಹಾತಾಯಿ


ಅದು 1920ರ ಕಾಲ. ಸಂಪ್ರದಾಯಸ್ಥರೇ ಹೆಚ್ಚಾಗಿ ನೆಲೆಸಿದ್ದ ಉಡುಪಿಯಲ್ಲಿ ವೈದ್ಯಕೀಯ ವ್ಯವಸ್ಥೆಗಳು ಹೆಚ್ಚಾಗಿ ಲಭ್ಯವಿರಲಿಲ್ಲ. ಕೆಲವೇ ಕೆಲವು ಪುರುಷ ವೈದ್ಯರನ್ನು ಹೊಂದಿದ್ದ ದವಾಖಾನೆಗಳಲ್ಲಿ ಮಹಿಳಾ ರೋಗಿಗಳನ್ನು ಪರೀಕ್ಷಿಸಲು ಪ್ರತ್ಯೇಕ ವ್ಯವಸ್ಥೆಯಿಲ್ಲದೆ ಜನಸಾಮಾನ್ಯರು ಪರದಾಡುವಂತಾಗಿತ್ತು. ಗರ್ಭಿಣಿಯರಿಗಂತೂ ಪ್ರಸವ ಕಾಲದಲ್ಲಿ ಸಾಕಷ್ಟು ತೊಂದರೆಗಳಾಗಿ ಬಾಣಂತಿ ಹಾಗೂ ಹಸುಗೂಸುಗಳ ಸಾವು-ನೋವುಗಳು ಸಂಭವಿಸುತ್ತಿತ್ತು. ಮಹಿಳಾ ಡಾಕ್ಟರ್ ಒಬ್ಬರು ಬಂದರೆ ನಮ್ಮೆಲ್ಲಾ iಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಇವರೆಲ್ಲರ ದೈನಂದಿನ ಪ್ರಾರ್ಥನೆಯಾಗಿತ್ತು. ಕೊನೆಗೂ ದೇವರು ಇವರ ಪ್ರಾರ್ಥನೆಯನ್ನು ಲಾಲಿಸಿದನೆಂದು ಕಾಣುತ್ತದೆ. ಒಬ್ಬಾಕೆ ಮಹಿಳೆ ದೂರದೇಶದಿಂದ ಉಡುಪಿಗೆ ಬಂದಳು. ಮಹಿಳೆಯರ ಆರೋಗ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಳು. ಆಕೆಯ ಹೆಸರು ಡಾ. ಈವಾ ಲೊಂಬಾರ್ಡ್.
ಈವಾ ಲೊಂಬಾರ್ಡ್ ಜನಿಸಿದ್ದು 1890ರಲ್ಲಿ. ಹುಟ್ಟೂರು ಸ್ವಿಟ್ಜರ್ಲ್ಯಾಂಡ್ ದೇಶದ ಜಿನೇವಾ. ಈಕೆಯ ತಂದೆ ಮೊದಲು ಬ್ಯಾಂಕ್ ಮ್ಯಾನೇಜರ್ ಆಗಿದ್ದವರು ನಂತರ ಕ್ರೈಸ್ತ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಮಹಿಳಾ ಖೈದಿಗಳ ನಡುವೆ ಸೇವೆ ಸಲ್ಲಿಸುತ್ತಿದ್ದರು. ಹೆತ್ತವರ ಮೂಲಕ ಸೇವೆಯ ಶ್ರೇಷ್ಠತೆಯನ್ನು ಕಂಡ ಬಾಲೆ 14ರ ಹರೆಯದಲ್ಲಿಯೇ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತೇನೆಂದು ನಿರ್ಧರಿಸಿದಳು. 1918ರಲ್ಲಿ ಜಿನೇವಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದು ಬಾಸೆಲ್ ಮತ್ತು ಜಿನೇವಾದಲ್ಲಿ ಎರಡು ವರ್ಷ ವೃತ್ತಿಜೀವನ ನಡೆಸಿದರು. ಆದರೆ ಆಕೆಯಲ್ಲಿದ್ದ ತುಡಿತ ಬೇರೆಯೇ ಆಗಿತ್ತು. ವೈದ್ಯಕೀಯ ಸವಲತ್ತುಗಳಿಲ್ಲದೆ ಬಳಲುತ್ತಿರುವ ಬಡಜನರಿಗಾಗಿ ನಾನು ಸೇವೆ ಸಲ್ಲಿಸಬೇಕು ಎಂದು ಆಕೆ ನಿರ್ಧರಿಸದ್ದರು. ಹಾಗಾಗಿ 1921 ರಲ್ಲಿ ನೇರವಾಗಿ ಮೈಸೂರಿಗೆ ಬಂದರು.

ಉಡುಪಿಯಲ್ಲಿ
ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಒಂದು ವರ್ಷಗಳ ಕಾಲ ಇಲ್ಲಿನ ಖಾಯಿಲೆಗಳು ಅದೇ ರೀತಿ ಇಲ್ಲಿನ ಆಚಾರ ವಿಚಾರಗಳು. ಭಾಷೆ ಮುಂತಾದವುಗಳನ್ನು ಅಭ್ಯಸಿಸಿದ ನಂತರ 1923 ರಲ್ಲಿ ಉಡುಪಿಗೆ ಬಂದರು. ಆಗ ಉಡುಪಿಯಲ್ಲಿ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆತರುವ ಪರಿಪಾಠವಿರಲಿಲ್ಲ. ಮನೆಯಿಂದ ಹೊರ ಕೊಟ್ಟಿಗೆಗಳಲ್ಲಿ ಹೆರಿಗೆ ಮಾಡಿಸಲಾಗುತ್ತಿತ್ತು. ಯಾಕೆಂದರೆ ಮಗುವಿಗೆ ಜನನ ನೀಡಿದ 40 ದಿನಗಳ ವರೆಗೆ ಅವರನ್ನು ಮೈಲಿಗೆಯ ದೃಷ್ಟಿಯಲ್ಲಿ ನೋಡಲಾಗುತ್ತಿತ್ತು. ಆದರೆ ಈವಾ ಡಾಕ್ಟರ್ ಬಂದ ಮೇಲೆ ಇದೆಲ್ಲವೂ ಬದಲಾಯಿತು. ಜೂನ್ 15, 1923ರಂದು ಉಡುಪಿಯಲ್ಲಿ 6 ಬೆಡ್ಗಳ ಮಿಷನ್ ಆಸ್ಪತ್ರೆಯನ್ನು ಆರಂಭಿಸಿದರು. ಇಬ್ಬರು ನರ್ಸ್, ಕೆಲವು ಸಹಾಯಕರು ಹಾಗೂ ಒಬ್ಬಾಕೆ ಡಾಕ್ಟರ್ ಇರುವ ಆಸ್ಪತ್ರೆ ಇದಾಗಿತ್ತು. ಮಹಿಳೆಯರಿಗಾಗಿ ಹಾಗೂ ಮಕ್ಕಳಿಗಾಗಿ ಆರಂಭಗೊಂಡ ಆಸ್ಪತ್ರೆ ಉಡುಪಿ ಆಸುಪಾಸಿನ ಜನರಿಗೆ ಬಹಳಷ್ಟು ಸಂತಸ ಹಾಗೂ ನೆಮ್ಮದಿ ತಂದಿತ್ತು. ದಿನದಿನವೂ ಜನರು 'ಅಮ್ಮ'ನನ್ನು ನೋಡಲು ಬರುತ್ತಿದ್ದರು. ಕೆಲವರು ಬರುತ್ತಿದ್ದದ್ದು ಚಿಕಿತ್ಸೆಗಾಗಿಯಾದರೆ ಇನ್ನು ಕೆಲವರಿಗೆ 'ಅಮ್ಮ' ಸೀರೆ ಉಡದೆ ಬೇರೆಯದೇ ರೀತಿಯ ಉಡುಪನ್ನು ಧರಿಸುವುದು ಸೋಜಿಗವಾಗಿ ಕಂಡದ್ದರಿಂದಲೂ ಅವರನ್ನು ನೋಡಲು ಬರುತ್ತಿದ್ದರು.
ಈವಾ ಲೊಂಬಾರ್ಡ್  ಬಂದ ನಂತರವೂ ಕೆಲವು ಹೆರಿಗೆಗಳು ಮನೆಯಲ್ಲೇ ನಡೆಯುತ್ತಿದ್ದವು. ಆಗೆಲ್ಲಾ ದಿಟ್ಟ  ಮಹಿಳೆ ದೂರವನ್ನೂ ಲೆಕ್ಕಿಸದೆ ನಡೆದುಕೊಂಡು ಹೋಗಿ, ಅಥವಾ ಕುದುರೆಗಾಡಿಯಲ್ಲಿ ಮುಂದಕ್ಕೆ ಕಾರಲ್ಲಿ ಸಾಗಿ ಮನೆಗಳಲ್ಲೇ ಹೆರಿಗೆ ನಡೆಸುತ್ತಿದ್ದರಂತೆ. ಹೆರಿಗೆಗಾಗಿ ಪ್ರತ್ಯೇಕ ವಾರ್ಡ್ ಅಗತ್ಯತೆಯನ್ನು ಅರಿತುಕೊಂಡ ಈವಾ 1925ರಲ್ಲಿ ಪ್ರತ್ಯೇಕ ಪ್ರಸೂತಿ ವಿಭಾಗ ಆರಂಭಿಸಿದರು. ಮುಂದಕ್ಕೆ ಮಕ್ಕಳ ವಾರ್ಡ್ಪುರುಷರ ವಾರ್ಡ್ಗಳು ಇಲ್ಲಿ ಅವರ ಕಾಲದಲ್ಲಿ ಪ್ರಾರಂಭಗೊಂಡವು. ಟಿಬಿ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಸ್ಯಾನಿಟೋರಿಯಂನ್ನು ಈಕೆಯೇ ಪ್ರಾರಂಭಿಸಿದರು.
ಮಕ್ಕಳು, ಮತ್ತು ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ಈವಾ ಲೊಂಬಾರ್ಡ್ ನೀಡುತ್ತಿದ್ದರು. ಸ್ವತಃ ತಾನೇ ಕಠಿಣ ಶ್ರಮಪಡುವುದರ ಜೊತೆಗೆ ತನ್ನ ಸಹೋದ್ಯೋಗಿಗಳು ಕೂಡಾ ಕರ್ತವ್ಯಬದ್ಧರಾಗಿರಬೇಕೆಂದು ಆಶಿಸುತ್ತಿದ್ದರು. 1954ರಲ್ಲಿ ತನ್ನ ಜವಾಬ್ದಾರಿಯನ್ನು ಭಾರತೀಯ ಡಾಕ್ಟರ್ಗೆ ವಹಿಸಿ 1957ರಲ್ಲಿ ಸ್ವಿಟ್ಜರ್ಲ್ಯಾಂಡ್ಗೆ ತೆರಳಿದರು. ಸರಳಜೀವನವನ್ನು ನಡೆಸುತ್ತಿದ್ದ ಅವರು ಮುಂದಕ್ಕೆ ಹಿರಿಯ ನಾಗರಿಕರ ಆಶ್ರಮವನ್ನು ಸೇರಿ 1978ರಲ್ಲಿ  ನಿಧನರಾದರು.
ಸೇವೆ ಮೆಚ್ಚಿದ ಡಾ.ಟಿ.ಎಂ.. ಪೈ

ಆಧುನಿಕ ಮಣಿಪಾಲದ ನಿರ್ಮಾತೃ ಡಾ. ಟಿ.ಎಂ.. ಪೈಗಳು ತಮ್ಮ ಮಿತ್ರರಾಗಿದ್ದ ಈವಾ ಲೊಂಬಾರ್ಡ್ರವರ ಸೇವೆಯನ್ನು ಬಹುವಾಗಿ ಮೆಚ್ಚಿ ಹೀಗಂದಿದ್ದಾರೆ. ಡಾ. ಈವಾ ಲೊಂಬಾರ್ಡ್ರವರಲ್ಲಿ ದಿವ್ಯಪ್ರಭೆಯಿದೆ. ಅಂತವರು ಯಾವ ದೇಶದಿಂದ ಬರುತ್ತಾರೆಂಬುದು ಮುಖ್ಯವಲ್ಲ. ಭರವಸೆ ಹಾಗೂ ಸಂತಸದ ಜ್ಯೋತಿಯನ್ನು ಹಿಡಿದುಕೊಂಡಿರುವ ದೇವತೆಯಂತೆ ಅವರು ವೈದ್ಯಕೀಯ ಶುಶ್ರೂಷೆಗೆ ನೀಡಿರುವ ಕೊಡುಗೆ ಕ್ಷೇತ್ರಕ್ಕೆ ದಾರಿದೀಪದಂತಿದೆ ಹಾಗೂ ಅವರಂತಹ ಮಹನೀಯರುಗಳ ಅಗತ್ಯ ಸಮಾಜಕ್ಕಿದೆ. ಅವರ ಸಾಧನೆಯನ್ನು ಹಾಗೂ ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಯನ್ನು ಗೌರವದಿಂದ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಭಾನುವಾರ, ಫೆಬ್ರವರಿ 21, 2016

ಎರಡು ಗೆರೆಯ ಕಾಪಿ ಪುಸ್ತಕ

                ಇನ್ನೂ ಮುಸುಕೆಳೆದು ಮಲಗಬೇಕೆಂಬ ಮನಸ್ಸಿರುವಾಗಲೇ ಅಪ್ಪ ಒತ್ತಾಯ ಮಾಡಿ ಎಬ್ಬಿಸಿ ಹಲ್ಲುಜ್ಜಲು ಹೇಳುತ್ತಿದ್ದ ದಿನಗಳು ನೆನಪಾಗುತ್ತವೆ. ಹೊರಗಡೆ ಇನ್ನೂ ಸುರಿಯುತ್ತಿರುವ ಮಳೆ, ಕಪ್ಪೆಗಳ ಸಂಗೀತ ಕಚೇರಿ, ಕರೆಂಟು ರಾತ್ರಿ ಹೋದದ್ದು ಇನ್ನೂ ಬಂದಿಲ್ಲ.. ಹೀಗೆ ಒಂದೊದನ್ನೇ ನೆನಪು ಮಾಡಿಕೊಳ್ಳುತ್ತಾ ಹೊರಗೆ ಬರುತ್ತಿದ್ದೆ. ಇಂದು ಯಾವ ದಿನ? ಭಾನುವಾರವಿರಬಹುದಾ ಎಂಬ ಆಸೆಯೊಂದು ಮೂಡುತ್ತಿರುವಾಗಲೇ ಮೆದುಳಿನ ಸ್ವಿಚ್ ಆನ್ ಆಗಿ ಇಂದು ವಾರದ ದಿನ, ನೀನು ಶಾಲೆಗೆ ಹೋಗಬೇಕು ಎಂಬ ಸಂದೇಶ ಬರುತ್ತಿತ್ತು. ಒಮ್ಮೆ ಮಳೆಯಲ್ಲಿ ಹೊರಗೆ ಹೋಗುವುದಕ್ಕೆ ಬೇಜಾರೆನಿಸಿದರೂ ಮರುಕ್ಷಣದಲ್ಲೇ ಗೆಳೆಯರು, ಪಾಠ, ಹೊಸ ತರಗತಿ ಎಲ್ಲವೂ ನೆನಪಾಗಿ ಖುಯಾಗುತ್ತಿತ್ತು. ಶಾಲೆಗೆ ಹೊರಡಲು ಬೇಗ ರೆಡಿಯಾಗುತ್ತಿದ್ದೆ.

                ನೀಲಿ-ಬಿಳಿ ಯೂನಿಫಾರ್ಮಿಗೆ ಇಸ್ತ್ರಿ ತಾಗಿಸಿದ್ದು ನೆನಪಿಲ್ಲ. ಮೂರು-ನಾಲ್ಕು ವರ್ಷಕ್ಕೊಮ್ಮೆ ಹೊಸ ಬ್ಯಾಗು ಬೇಕೆಂದು ಹಠ ಹಿಡಿದು ಪಡೆದುಕೊಳ್ಳುತ್ತಿದ್ದೆ. ಸೀನಿಯರ್ ಗೆಳೆಯರಿಂದ ಅರ್ಧರೇಟಿಗೆ ಪಾಠ ಪುಸ್ತಕ ತೆಗೆದುಕೊಳ್ಳುತ್ತಿದ್ದೆ. ಹೊಸ ಪುಸ್ತಕಗಳಿಗೆ  ಹಿಂದಿನ ದಿನ ರಾತ್ರಿ ಅಮ್ಮ ಬೈಂಡ್ ಹಾಕುತ್ತಿದ್ದರು. ನೀಟಾಗಿ ಬೈಂಡ್ ಹಾಕಿದ ಮೇಲೆ ಕ್ರಿಕೆಟ್ ಆಟಗಾರರ ಅಥವಾ ರೆಸ್ಲಿಂಗ್ ದೈತ್ಯರ ಚಿತ್ರವಿದ್ದ ಲೇಬಲ್ ಅಂಟಿಸಿ ಅದರಲ್ಲಿ ಹೆಸರು, ತರಗತಿ, ವಿಜ್ಞಾನ ನೋಟ್ಸ್ ಪುಸ್ತಕ, ಶ್ರೀ ಗಣಪತಿ ಹಿ.ಪ್ರಾ. ಶಾಲೆ... ಎಂದೆಲ್ಲಾ ಬರೆಯುವಾಗ ಅದೆಷ್ಟು ಖುಷಿಯಾಗುತ್ತಿತ್ತು. ಕಂಪಾಸ್  ಬಾಕ್ಸಿನ ಒಳಗೆ ಅಂಟಿಸಿದ ಟೈಮ್ ಟೇಬಲ್ ನೋಡಿ ಆಯಾ ತರಗತಿಗಳಿಗೆ ಬೇಕಾದ ಪುಸ್ತಕ ಜೋಡಿಸಿ ಶಾಲೆಗೆ ಹೊರಡುತ್ತಿದ್ದೆ.

                ಪ್ರೈಮರಿ ಶಾಲೆಗೆ ಹೋಗುವ ದಾರಿಯುದ್ದಕ್ಕೂ ಪಕ್ಕದ ಮನೆಯ ಪುಟ್ಟ ನನ್ನ ಜೊತೆಗಿರುತ್ತಿದ್ದ. ಗದ್ದೆಯ ಬದುವಿ ಮೇಲೆ ನಡೆದು ಹೋಗುವಾಗ ಮಳೆಗೆ ಅಲ್ಲಲ್ಲಿ ಕಾಲು ಜರಿದು ಬೀಳುತ್ತಿದ್ದದ್ದು, ನೀರು ಹರಿಯುವ ಸಣ್ಣ ತೋಡು ಬಂದಾಗ ಕಾಲನ್ನು ಅಲ್ಲಿಯೇ ನಿಲ್ಲಿಸಿ ತಂಪು ನೀರಿನ ಸುಖ ಪಡೆದದ್ದು ಎಲ್ಲವೂ ನೆನಪಾಗುತ್ತವೆ. ಮೂರನೇ ಕ್ಲಾಸಿನವರೆಗೆ ನನಗೆ ರೈನ್ಕೋಟ್ ರಕ್ಷಣೆಯಿತ್ತು. ನಂತರ ಹೊಸ ಕೊಡೆ ಬಂತು. ಸಂಜೆ ಶಾಲೆ ಬಿಡುವ ಸಮಯಕ್ಕೆ ಮಳೆ ಬಂದರೆ ಎಲ್ಲರ ಮುಂದೆ ಟಪ್ ಎಂದು ನನ್ನ ಹೊಸ ಕೊಡೆ ಬಿಚ್ಚಿ ರಾಜಾರೋಷವಾಗಿ ನಡೆಯುತ್ತಿದ್ದೆ. ಹೊಸ ಕೊಡೆಯ ಬಟ್ಟೆಯಲ್ಲಿ ನೀರು ನಿಂತು ಒದ್ದೆಯಾಗುವುದಿಲ್ಲ, ಅದನ್ನು ಹಾಗೆಯೇ ಒಳಗೆ ತಂದು ಮಡಚಿಡಬಹುದೆಂದು ಗೊತ್ತಾದಾಗ ನನ್ನ ಕೊಡೆಯೇ ಶ್ರೇಷ್ಠ ಎಂದೆನಿಸುತ್ತಿತ್ತು. ಕೆಲವು ದಿನಗಳಲ್ಲೇ ನನ್ನ ಕೊಡೆ ಹೊಸತನದ ಗುಣ ಕಳೆದುಕೊಂಡು ಎಲ್ಲರೊಳಗೊಂದಾಗುತ್ತಿತ್ತು.

                ಬ್ಯಾಗಿನೊಳಗಿಂದ ಪುಸ್ತಕ ತೆಗೆದರೆ ಹೊಸ ಪುಸ್ತಕದೊಳಗಿಂದ ಬರುವ ಘಾಟು ಇಂದಿಗೂ ನೆನಪಿಸಿಕೊಳ್ಳುವಷ್ಟು ಗಾಢವಾಗಿದೆ. ನಾಲ್ಕೈದು ನೋಟ್ಸು ಪುಸ್ತಕ, ಎರಡು ಗೆರೆಯ, ಮೂರು ಗೆರೆಯ, ನಾಲ್ಕು ಗೆರೆಯ ಕನ್ನಡ, ಹಿಂದಿ, ಇಂಗ್ಲೀಷ್ ಕಾಪಿ ಬುಕ್ಗಳು (ಅದು ಕಾಪಿಯೋ ಅಥವಾ ಕೋಪಿಯೋ ಯಾವುದು ಸರಿಯಾದ ಭಾಷಾ ಪ್ರಯೋಗ ಎಂದು ತಿಳಿಯುವುದು ಆಗ ನನ್ನಂತಹ ಕಪಿಗೆ ಕಷ್ಟವಾಗುತ್ತಿತ್ತು!), ಪಾಠ ಪುಸ್ತಕಗಳು, ಶ್ರೀರಾಮ ಮಗ್ಗಿ ಪುಸ್ತಕ, ಕಂಪಾಸ್ ಬಾಕ್ಸ್, ಅರ್ಧ ಲೀಟರ್ ನೀರಿನ ಬಾಟಲಿ, ಇವು ನನ್ನ ಬ್ಯಾಗಿನೊಳಗಿರುತ್ತಿದ್ದ ಸೊತ್ತುಗಳು. ಕಾಪಿ ಪುಸ್ತಕದಲ್ಲಿ ದುಂಡಗೆ ಬರೆದು ಮಾಸ್ತರರಿಂದ ಭೇಷ್ ಅನ್ನಿಸಿಕೊಳ್ಳಬೇಕೆಂಬ ಅಭಿಲಾಷೆ ಬಹಳಷ್ಟಿತ್ತು. ಅಪರೂಪಕ್ಕೆ ಅವರು 'ಗುಡ್' ಎಂದು ಬರೆದಾಗ ಖುಷಿಯೋ ಖುಷಿ.

                ಬ್ಯಾಗಿನೊಳಗಿದ್ದ ಸಂಪತ್ತಿನಲ್ಲಿ ಕಂಪಾಸ್ ಬಾಕ್ಸಿಗೆ ಅದರದ್ದೇ ಆದ ಸ್ಥಾನವಿತ್ತು. ಎರಡು ಬರೆಯುವ ಪೆನ್ನು, ಒಂದು ಬರೆಯದ ಪೆನ್ನು, ಎರಡು ರಿಫೀಲ್, ಪೆನ್ಸಿಲ್, ರಬ್ಬರ್, ಕೋನಮಾಪಕ, ಕೈವಾರ, ಮಿನಿ ಸ್ಕೇಲು ಪಠ್ಯಕ್ಕೆ ಸಂಬಂಧಪಟ್ಟದ್ದಾದರೆ ದೇವರ ಫೋಟೋ, ನೆಚ್ಚಿನ ಹೀರೊ ಫೋಟೋ, ಶಿಕ್ಷಕರ ದಿನಾಚರಣೆಗೆ ಶಾಲೆಯಲ್ಲಿ ಹಂಚಿದ್ದ ಎಸ್. ರಾಧಾಕೃಷ್ಣನ್ ಫೋಟೋ, ಕೆಲವು ಅಪರೂಪದ ಸಣ್ಣ ಕಲ್ಲುಗಳು, ತಳಭಾಗದಲ್ಲಿ ಅಥವಾ ಪುಸ್ತಕದೊಳಗೆ ಸೇರಿರುತ್ತಿದ್ದ ವಿಲುಗರಿ, ಹೀಗೆ ಎಲ್ಲಕ್ಕೂ ಅಲ್ಲಿ ಜಾಗತ್ತು. ಜೊತೆಗೆ ಒಂದಲ್ಲ ಒಂದು ದಿನ ವಿಲುಗರಿ ಮರಿ ಹಾಕುತ್ತೆ ಎಂಬ ಮುಗ್ಧ ನಂಬಿಕೆ ಮನಸ್ಸಲ್ಲಿತ್ತು.

                ಶಾಲೆ ಪ್ರಾರಂಭವಾದ ತಿಂಗಳ ನಂತರ ನನ್ನ ಹುಟ್ಟುಹಬ್ಬ ಬರುತ್ತಿತ್ತು. ಅಪ್ಪ ಹಿಂದಿನ ದಿನವೇ ತಂದ ಚಾಕಲೇಟು ಕಟ್ಟು ಹಿಡಿದು ಹೊಸಬಟ್ಟೆ ಧರಿಸಿ ಶಾಲೆಗೆ ಹೋಗುತ್ತಿದ್ದೆ. ಮೊದಲು ಆಪ್ತ ಸ್ನೇಹಿತರ ಶುಭಾಶಯ, ಕೈಯಲ್ಲೇ ಬರೆದ ಶುಭಾಶಯ ಪತ್ರಗಳು, ಚಿಕ್ಕ ಪುಟ್ಟ ಉಡುಗೊರೆ ಸಿಗುತ್ತಿತ್ತು. ಶಿಕ್ಷಕರಿಗೆ ಮೊದಲು ಚಾಕಲೇಟು ಕೊಟ್ಟು ನಂತರ ತರಗತಿಯ ಸ್ನೇಹಿತರಿಗೆ ಹಂಚುವಾಗ ಏನೋ ಖುಷಿ. ಕ್ಲಾಸಿನಲ್ಲಿ ಹೀರೋಯಿನ್ ಥರಾ ಇದ್ದವಳು ನಂಗೆ ವಿಶ್ ಮಾಡುತ್ತಾಳಾ ಇಲ್ಲವಾ ಎಂಬ ಕಾತರತೆಯೂ ಜೊತೆಗಿರುತ್ತಿತ್ತು. ದಿನದ ಮಟ್ಟಿಗೆ ಶಿಕ್ಷಕರಿಂದ ಪೆಟ್ಟಿನ ಮಾಫಿ ಇರುತ್ತದೆ ಎನ್ನುವುದು ಆಗ ಹುಟ್ಟುಹಬ್ಬಕ್ಕೆ ಸಿಗುತ್ತಿದ್ದ ದೊಡ್ಡ ಉಡುಗೊರೆಯಾಗಿತ್ತು.

                ಮಳೆಗಾಲದಲ್ಲಿ ಶಾಲೆಗೆ ಬರುವಾಗ ಮಕ್ಕಳಿಗೆ ಅಪ್ಪ-ಅಮ್ಮನ ಜೊತೆ ಹೆಚ್ಚಾಗಿ ಇರುತ್ತಿತ್ತು. ಗೊರಬು ಹಿಡಿದೋ ಅಥವಾ ಕಡ್ಡಿ ತುಂಡಾದ ಕೊಡೆ ಹಿಡಿದೋ ಹೆತ್ತವರು ಮಕ್ಕಳನ್ನು ಗದ್ದೆ- ಬಯಲಿನಲ್ಲಿ ನಡೆಸಿಕೊಂಡು ಬರುತ್ತಿದ್ದರು. ಮಳೆ ಹೆಚ್ಚಾಗಿ 'ಬೊಲ್ಲ' (ನೆರೆ) ಬಂದಾಗ ಹೆತ್ತವರು ಸಂಜೆ ಬೇಗ ಬಂದು ಶಾಲೆಯ ಜಗುಲಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿತ್ತು. ಮಳೆ ಜೋರಾದ ಕೂಡಲೇ ಶಾಲೆಗೆ ರಜೆ ಸಿಗಬಹುದೆಂಬ ಆಸೆ ಒಳಗೊಳಗೆ ಜಾಗೃತವಾಗಿ ಬೆಚ್ಚಗಿನ ಖುಷಿಯಾಗುತ್ತಿತ್ತು. ಕೊನೆಗೂ ಹೆಡ್ಮಾಸ್ಟರ್ ರಜೆ ಘೋಷಿಸಿದಾಗ ಮಳೆಯ ಸದ್ದಿಗಿಂತಲೂ ಜಾಸ್ತಿ ಕಿರುಚಿದ ನೆನಪು. ಇಂದು ತೊಟ್ಟಿಕ್ಕುತ್ತಿರುವ ಮಳೆ ಹನಿಗೆ ಕೈಯೊಡ್ಡಿ ನಿಂತಾಗ ಹಳೆಯದೆಲ್ಲವೂ ನೆನಪಾಗುತ್ತದೆ. ಜೊತೆಗೊಂದು ಹಳೆಯ ಡೈಲಾಗ್ 'ಮಕ್ಕಳಾಗಿರುವುದೇ ಚಂದ ಅಲ್ಲವಾ....'